ಕನ್ನಡದ ಅಭಿವೃದ್ದಿಗೆ ತೊಡಕಾಗಿರುವ ಅಂಶಗಳು

[ವರ್ಷ ೨೦೦೦ದಲ್ಲಿ ಹುಟ್ಟು ಹಾಕಿದ ಕನ್ನಡ ಕಲಿಯ ಅಭಿಯಾನ ಫಲಪ್ರದವಾಗಿ ಮುಂದುವರೆಯುತ್ತಿದೆ.   ವಿದೇಶಗಳಲ್ಲಿ ಕನ್ನಡ ಶಾಲೆಗಳು ಹುಟ್ಟುತ್ತಿದ್ದು ಕನ್ನಡ ಕಲಿಕೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಇದರಲ್ಲಿ ಕೇವಲ ಕನ್ನಡ ಪ್ರೀತಿ ಅಭಿಮಾನಗಳಿಂದ,  ಮಕ್ಕಳನ್ನು ಕನ್ನಡ ಸಂಸ್ಕೃತಿಯಲ್ಲಿ ಬೆಳೆಸುವ ಹಂಬಲದಿಂದ ತಮ್ಮನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿರುವ ತಂದೆ ತಾಯಂದಿರು ಸ್ತುತ್ಯಾರ್ಹರು. ಕನ್ನಡ ಕಾಯಕದ ಅಡಿಯಲ್ಲಿ, ಕರ್ನಾಟಕದಲ್ಲಿನ ಸರಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳು ವಿದೇಶಗಳಲ್ಲಿನ ಕನ್ನಡದತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ.  ಆದರೆ ಕರ್ನಾಟಕದಲ್ಲೇ ಕನ್ನಡದ ಸ್ಥಿತಿ ಚಿಂತನೀಯವಾಗಿರುವಾಗ, ಇದು ಬೇರಿಗೆ ಹುಳ ಹತ್ತಿರುವಾಗ ಹೂಗಳನ್ನು ಅರಳಿಸುವ  ಅಥವಾ ಕೆಳಗೆ ತೂಗಾಡುತ್ತಿರುವ ಹಣ್ಣುಗಳನ್ನು ಬಾಚಿಕೊಳ್ಳುವ  ಯತ್ನ ಎನ್ನಿಸುವುದು ಸಹಜ.  ಕರ್ನಾಟಕದಲ್ಲಿ ಕನ್ನಡದ ಅಭಿವೃದ್ಧಿ ಏಕೆ ಕುಂಠಿತವಾಗಿದೆ? ಅದಕ್ಕೆ ತೊಡಕಾಗಿರುವ ಅಂಶಗಳು ಯಾವವು? ಇವುಗಳನ್ನು ತಿಳಿದುಕೊಂಡರೆ  ಸರಿಯಾದ ಪರಿಹಾರಗಳನ್ನು ರೂಪಿಸಿಕೊಳ್ಳಬಹುದು.  ಈ  ನಿಟ್ಟಿನಲ್ಲಿ ಶ್ರೀಯುತ ವಿವೇಕ ಬೆಟ್ಕುಳಿ ಅವರ  ಲೇಖನ ಕಣ್ಣು ತೆರೆಸುವಂತಿದೆ. ]


*** ವಿವೇಕ ಬೆಟ್ಕುಳಿ

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ತನ್ನದೇ ಆದ ಪರಂಪರೆ ಇದೆ. ಇಂತಹ ಕನ್ನಡ ಭಾಷೆ ಪ್ರಸ್ಥುತ ಸ್ಥಿತಿಯಲ್ಲಿ ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತ ಇರುವುದನ್ನು ಕಾಣಬಹುದಾಗಿದೆ. ಕನ್ನಡದ ನೆಲೆಯಾದ ಕನಾ౯ಟಕದಲ್ಲಿಯೇ ಕನ್ನಡ ಭಾಷೆ ಮತ್ತು ಕನ್ನಡದ ಜನ ಪರಕೀಯರಾಗಿರುವಂತಹ ಸಾಕಷ್ಟು ಉದಾಹರಣೆಗಳಿವೆ. ಕನ್ನಡಕ್ಕಾಗಿ ಕನ್ನಡ ನೆಲದಲ್ಲಿ ಹೋರಾಡಬೇಕಾದ ಪರಿಸ್ಥಿತಿ ಎದುರಾಗಿರುವುದು. ಕನ್ನಡ ಭಾಷೆ ಹಿಂದೆಯೂ ಇತ್ತು. ಇಂದೂ ಇದೆ, ಮುಂದೆಯೂ ಇರುವುದು ಆ ಬಗ್ಗೆ ಯಾವುದೇ ಅನುಮಾನ ಬೇಡ. ಆದರೆ ಭಾಷೆ ತನ್ನ ಹಿಂಧಿನ ವೈಭವನ್ನು ಹಾಗೇಯೇ ಇರಿಸಿಕೊಂಡು ಮುಂದುವರೆಯವುದೆ? ಅಥವಾ ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಹಿಂದಿನ ವೈಭವವನ್ನು ಕೇವಲ ಒಂದು ಕಥೆಯಂತೆ ಹೇಳಬೇಕಾದ ಪರಿಸ್ಥಿತಿ ಬರುವುದೆ ಎಂಬುದನ್ನು ಗಮನಿಸಬೇಕಾಗಿದೆ. ನಮ್ಮ ಭಾಷೆಯ ಮೇಲೆ ಪರಿಣಾಮ ಬೀರಿದ ಅಂಶಗಳನ್ನು ಈ ಕೆಳಗಿನಂತೆ ಕೆಲವನ್ನು ಗುರುತಿಸಬಹುದಾಗಿದೆ.

ಜಾಗತೀಕರಣ : ಇಡೀ ವಿಶ್ವವೇ ಒಂದು ಮಾರುಕಟ್ಟೆಯಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಮೇಲೆ ನಮ್ಮ ದೇಶಕ್ಕೆ ಹತ್ತಾರೂ ದೇಶಗಳಿಂದ ಸಾಮಗ್ರಿಗಳು ಬಂದು ಹೋಗಲು ಪ್ರಾರಂಭಿಸಿದವು. ಬಾಹ್ಯ ಸೌಂಧರ್ಯದ ದಾಸರಾದ ಅನಿವಾರ್ಯವಾಗಿ ವಿದೇಶಿ ವಸ್ತುಗಳ ಆಕರ್ಷಣೆಗೆ ಒಳಗಾಗಿ ಖರೀದಿ ಮಾಡಿದೆವು. ವಿದೇಶಿ ವಸ್ತುಗಳು ಜೊತೆಗೆ ವಿದೇಶಿ ಭಾಷೆಯೂ ನಮ್ಮಲ್ಲಿ ಬಂದು ಜನಸಾಮಾನ್ಯರಲ್ಲಿ ಆಡು ಮಾತಾಗಿ ಪರಿವರ್ತನೆ ಆಯಿತು. ಆಗ ನಮ್ಮ ಮೂಲ ಭಾಷೆಯ ಕೆಲವೊಂದು ಪದಗಳು ಮರೆಯಾದವು ಇಲ್ಲ ಶುದ್ದ ಕನ್ನಡ ಪುಸಕ್ತಕ್ಕೆ ಮಾತ್ರ ಸೀಮಿತವಾಯಿತು. ಪ್ರಪಂಚದೊಡನೆ ವ್ಯವಹರಿಸಲು ಅನಿವಾರ್ಯವಾಗಿ ಇಂಗ್ಲೀಷ ಭಾಷೆ ಅಗತ್ಯ ಇರುವುದು ಸರಿ, ಆದರೇ ಆ ಅನಿವಾರ್ಯತೆ ಮುಂಬರುವ ಪೀಳಿಗೆಯಲ್ಲಿ ಮೂಲ ಭಾಷೆಯನ್ನೇ ಮರೆಯಾಗುವಂತೆ ಮಾಡಿತು. ಹಳ್ಳಿಯಲಿ ಹುಟ್ಟಿ ಬೆಳೆದ ವ್ಯಕ್ತಿಯೊಬ್ಬ ಕೆಲಸಕ್ಕಾಗಿ ಪಟ್ಟಣಕ್ಕೆ ಬಂದನು. ಇಂಗ್ಲೀಷ ಮಾತನಾಡುವುದನ್ನು ಕಲಿತು ಸಂಪಾದನೆ ಮಾಡಿ ವಿದೇಶಗಳಿಗೂ ಹೋಗಿ ಬಂದನು. ಅವನ ಮಕ್ಕಳು ಇಂಗ್ಲೀಷಲೇ ಜೀವನ ಪ್ರಾರಂಭಿಸಿದರು. ಅದೇ ಜೀವನದ ಯಶಸ್ಸಿಗೆ ಕಾರಣ ಎಂದು ಅವರ ಅಪ್ಪ ಅಮ್ಮ ನಂಬಿಸಿದರು. ಪರಿಣಾಮವಾಗಿ ಅಜ್ಜ ಅಜ್ಜಿಯೊಂದಿಗೆ ಮಾತನಾಡಲು ಸಹಾ ಅಪ್ಪ ಅಮ್ಮನ ಅನುವಾದದ ಸಹಾಯ ಬೇಕು ಎನ್ನುವಂತೆ ಆಗಿರುವುದು. ಈ ರೀತಿಯ ಸಾಕಷ್ಟು ಕುಟುಂಬಗಳನ್ನು ಇಂದು ಕಾಣುತ್ತಿರುವೆವು.

ರಾಷ್ರೀಯ ಪಕ್ಷಗಳ ಆಡಳಿತ : ಹೆಚ್ಚಾಗಿ ಕನಾ౯ಟಕದಲ್ಲಿ ಆಡಳಿತ ನಡೆಸಿದ್ದು ರಾಷ್ಟ್ರೀಯ ಪಕ್ಷಕಗಳು. ಈ ಪಕ್ಷಗಳ ಹಿಡಿತ ಇರುವುದು ದೆಹಲಿಯಲ್ಲಿ. ತಮ್ಮ ಹೈ ಕಮಾಂಡ ಜೊತೆಗೆ ತಗ್ಗಿ ಬಗ್ಗಿ ನಡೆಯಬೇಕಾಗುವುದು. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಭಾಷೆಯ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ಥಿತಿ ನಮ್ಮದಾಗಿರುವುದು. ಅದೇ, ತಮಿಳನಾಡು ಬಲಿಷ್ಠ ಪ್ರಾದೇಶಿಕ ಪಕ್ಷಕಗಳ ಕೈಯಲ್ಲಿ ಇರುವುದರಿಂದ ಭಾಷೆ, ನಾಡು ನುಡಿಯ ವಿಚಾರದಲ್ಲಿ ಅನಾಯಾಸವಾಗಿ ಅವರ ಧ್ವನಿಯೂ ಹೆಚ್ಚಾಗಿರುವುದು. ಸೌಲಭ್ಯವನ್ನು ಪಡೆದುಕೊಳ್ಳುವರು.

ರಾಜಕೀಯ ಒಮ್ಮತದ ಕೊರತೆ : ರಾಜ್ಯ ಭಾಷೆಯ ವಿಚಾರದಲ್ಲಿ ಒಮ್ಮತದಿಂದ ಧ್ವನಿ ಎತ್ತಬೇಕಾದ ಪ್ರಮುಖ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿಯೂ ಆಡಳಿತ ಹಾಗೂ ವಿರೋಧ ಪಕ್ಷಗಳ ರೀತಿ ವತಿ౯ಸುವುದನ್ನು ಕಾಣಬಹುದಾಗಿದೆ. ರಾಜ್ಯಕ್ಕೆ ಅನುದಾನ ತರುವ ವಿಚಾರ, ಸೌಲಭ್ಯವನ್ನು ಪಡೆಯುವುದು, ಸಂಬಂಧಿಸಿದವರ ಗಮನ ಸೆಳೆದು ವಿವಿಧ ಯೋಜನೆಯನ್ನು ತರುವುದು ಈ ಎಲ್ಲಾ ವಿಚಾರಗಳಲ್ಲಿ ನಮ್ಮಲ್ಲಿ ರಾಜಕೀಯ ಒಮ್ಮತ ಇಲ್ಲದೇ ಇರುವುದು ಕಂಡು ಬರುವುದು. ಇದು ಭಾಷೆಯ ಮೇಲೆ ಸಹಾ ಪರಿಣಾಮ ಬೀರಿರುವುದು.

ಪ್ರತೇಕತೆಯ ಕೂಗು : ಸ್ವಾತಂತ್ಯ ಪಡೆದು ನಮ್ಮ ರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದ ದಕ್ಷಣ ಕನಾ౯ಟಕದ ಅಭಿವೃದ್ದಿಗೆ ಎಲ್ಲಾ ಸಕಾ౯ರಗಳು ಹೆಚ್ಚಿನ ಗಮನ ನೀಡಿದವು. ಪರಿಣಾಮವಾಗಿ ಇಂದೂ ಅತಿ ಹೆಚ್ಚಿನ ಸಂಪನ್ಮೂಲ ಸಂಗ್ರಹ, ಅತಿ ಹೆಚ್ಚು ಸೌಲಭ್ಯ ಈ ಎರಡು ದಕ್ಷಿಣ ಕನಾ౯ಟಕದ ಭಾಗದ ಜಿಲ್ಲೆಯಲ್ಲಿಯೇ ಅಧಿಕವಾಗಿರುವುದು. ಸಹಜವಾಗಿ ರಾಜ್ಯದ ಇತರೆ ಭಾಗದಲ್ಲಿ ಪ್ರತೇಕತೆಯ ಕೂಗು ಕಾಣಿಸಿಕೊಳ್ಳುತ್ತ ಇರುವುದು. ಈ ಅಸಮಾನತೆಯ ಕಾರಣದಿಂದ ಇತರ ಭಾಷೆಗಳ ಪ್ರಭಾವ ಅಧಿಕವಾಗಿರುವುದು.

ಮದ ಏರಿಸುತ್ತಿರುವ ರಾಷ್ಟ್ರಭಕ್ತಿ :ರಾಷ್ಟ್ರಭಕ್ತಿಯ ಹೆಸರಿನಲ್ಲಿ ನಾವು ನಮ್ಮ ಭಾಷೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವೆವು. ಇಂಗ್ಲೀಷ ಪ್ರಪಂಚದ ಭಾಷೆಯಾಗಿ ಗುರುತಿಸಿಕೊಂಡರೆ, ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಪ್ರಯತ್ನ ನಡೆಯುತ್ತ ಇದೆ. ಇದಕ್ಕೆ ಪೂರಕವಾಗಿ ರಾಷ್ಟ್ರಭಕ್ತಿಯ ಕಾರ್ಡನ್ನೂ ಹೊಂದಿಸಿ ಪ್ರಚಾರ ಮಾಡಲಾಗುತ್ತಿರುವುದು. ಇಂದು ತೃತೀಯ ಭಾಷೆಯಾಗಿ ರಾಜ್ಯ ಪ್ರವೇಶಿಸಿದ ಹಿಂದಿ ಮುಂದೆ ರಾಷ್ಟ್ರಕ್ಕೆ ಒಂದೇ ಭಾಷೆ ಅಗತ್ಯ, ಅದೇ ಹಿಂದಿ ಆಗಿರುವುದು ಎಂದು ರಾಜಕೀಯ ಹೋರಾಟವೂ ಪ್ರಾರಂಭವಾಗಬಹುದು. ಮೊದಲು ನಾವು ಇರುವ, ಮನೆ ನಮ್ಮ ರಾಜ್ಯ, ನಮ್ಮ ಭಾಷೆ ಉಳಿದಾಗ ಅದರೊಂದಿಗೆ ರಾಷ್ಟ್ರಭಕ್ತಿಗೆ ಅರ್ಥಬರುವುದು. ಹೊರತಾಗಿ ರಾಷ್ಟ್ರವೇ ಸರ್ವಸ್ವ ಎಂಬ ಹಂತಕ್ಕೆ ನಾವು ಹೋದರೆ ನಮ್ಮ ತನವನ್ನು ಇರಿಸಿಕೊಳ್ಳುವುದು ಕಷ್ಟವಾಗುವುದು. ಇಂದಿನ ನಮ್ಮ ರಾಜ್ಯದ ಯುವಕರಿಗೆ ರಾಷ್ಟ್ರಭಕ್ತಿಯ ಗೀಳು ಹೆಚ್ಚಾಗಿದೆ ದುರಂತವೆಂದರೆ ನಮ್ಮ ರಾಜ್ಯ ಭಾಷೆಯ ಬಗ್ಗೆಅಭಿಮಾನ ಕಡಿಮೆಯಾಗುತ್ತಿರವುದು. ಇದು ನಮ್ಮ ಭಾಷೆಯ ಮೇಲೆ ಪ್ರಭಾವ ಬೀರುತ್ತಾ ಇರುವುದು.

ವ್ಯವಹಾರವಾಗಿ ಪರಿವರ್ತನೆ ಗೊಂಡಿರುವ ಸಿನಿಮಾ ಕ್ಷೇತ್ರ : ಭಾಷೆಯ ಏಳ್ಗೆಯಲ್ಲಿ ಸಿನಿಮಾ ಕ್ಷೇತ್ರದ ಕೊಡುಗೆಯೂ ಮುಖ್ಯವಾಗಿರುವುದು. ತಮಿಳು, ಮಲೆಯಾಳಂ, ತೆಲಗು ಈ ಭಾಷೆಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಗುಣಮಟ್ಟದ ಸಿನಿಮಾಗಳ ಕೊರತೆಯಿರುವುದು. ಸಿನಿಮಾಗಳಲ್ಲಿ ಬಳಸುವ ಭಾಷೆ, ಇತ್ತೀಚಿನ ಹಾಡುಗಳು, ಸಿನಿಮಾದ ಹೆಸರುಗಳು ಎಲ್ಲವುಗಳಲ್ಲಿ ಗುಣಮಟ್ಟದ ಕೊರತೆ ಕಾಣುತ್ತಿರುವುದು. ಭಾಷೆಯ ದೃಷ್ಠಿಯಿಂದ ಉತ್ತಮ ಎಂದು ಹೇಳುವ ಸಿನಿಮಾಗಳು ಪ್ರಶಸ್ತಿಗಳಿಕೆಗೆ ಮಾತ್ರ ಸಿಮೀತವಾಗುತ್ತಿರುವುದು. ಅದು ಅತಿ ಹೆಚ್ಚು ಜನರನ್ನು ತಲುಪುವಲ್ಲಿ ವಿಫಲವಾಗುತ್ತಿರುವುದು. ಕಾರಣ ಸಿನಿಮಾ ಎಂಬುದು ಇಂದು ಮನರಂಜನೆ ಒದಗಿಸುವ ಮಾಧ್ಯಮ ಮಾತ್ರ ಆಗಿಲ್ಲ. ಬದಲಾಗಿ ಹಣ ಹೂಡಿ ಹಿಂತೆಗೆಯುವ ಉದ್ಯಮ ಆಗಿರುವುದು. ಹೀಗೆ ಹಣ ಹಾಕಿ ತೆಗೆಯುವ ಉದ್ಯಮದಾರರಿಗೆ ಭಾಷೆಯ ಏಳ್ಗೆ ಮುಖ್ಯವಾಗಿಲ್ಲ ಎಂಬುದು ಗಮನಿಸಬೇಕಾಗಿದೆ.

ಮೌಲ್ಯಾಂಕನ ಪದ್ದತಿ : ಬೇರೆ ಬೇರೆ ಸಾಹಿತ್ಯ ವನ್ನು ಒದುವುದು, ಚಚಿ౯ಸುವುದು ಹೊಸದಾದ ವಿಚಾರವನ್ನು ಅದರೊಂದಿಗೆ ವಿಶ್ಲೇಷಿಸುವುದು, ವಿಮಶೆ౯ ಮಾಡುವುದು, ಪ್ರಸ್ತುತ ವಾತಾವರಣಕ್ಕೆ ಅನ್ವಯಿಸಿ ಹೊಸ ಟಿಪ್ಪಣೆ ಬರೆಯುವುದಾಗಿರಬಹುದು, ಈ ರೀತಿಯಾಗಿ ಭಾಷೆಯ ಬೆಳವಣಿಗೆಗೆ ಸಂಬಂಧಿಸಿದಂತೆ ವಿಭಿನ್ನ ಸಾಮರ್ಥ್ಯವನ್ನು ಮಕ್ಳಳಲ್ಲಿ ಬೆಳೆಸುವುದು ಅತಿ ಮುಖ್ಯವಾಗಿರುವುದು. ಆದರೆ ದುರಾದೃಷ್ಠವಶಾತ ನಮ್ಮಲ್ಲಿ ಅಂಕ ಗಳಿಸುವಿಕೆಗಾಗಿ ಮಾತ್ರ ಭಾಷೆ ಕಲಿಸುವ ಸ್ಥಿತಿ ಬಂದಿರುವುದು. ಭಾಷಾ ಶಿಕ್ಷಕರಾದವರೂ ಹೆಚ್ಚಿನವರೂ ಸಂಪೂರ್ಣ ಅಂಕವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಒತ್ತು ನೀಡುವುದನ್ನು ಕಾಣಬಹುದಾಗಿದೆ. ಅದಕ್ಕೆ ಪೂರಕವಾಗಿ ಕನ್ನಡ ಸಂಘಟನೆಗಳು ಸಕಾ౯ರ ಹೆಚ್ಚು ಅಂಕ ಪಡೆದವರಿಗೆ ಗೌರವ ಸನ್ಮಾನ ನೀಡುವುದನ್ನು ಕಾಣುವೆವು. ಪರಿಣಾಮವಾಗಿ ಪಠ್ಯಕ್ರಮದಲ್ಲಿ ಇರುವ ವಿಷಯಕ್ಕೆ ಮಾತ್ರ ಮಕ್ಕಳು ಸೀಮಿತರಾಗುತ್ತಿರುವರು. ಹತ್ತನೇ ತರಗತಿಯ ಫಲಿತಾಂಶದಲ್ಲಿ ವರ್ಷದಿಂದ ವರ್ಷಕ್ಕೆ ೧೨೫ಕ್ಕೆ ೧೨೫ ಅಂಕ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದು ಖಂಡಿತವಾಗಿ ಭಾಷಾ ಬೆಳವಣಿಗೆಗೆ ಎಚ್ಚರಿಕೆಯ ಗಂಟೆಯಾಗಿರುವುದು.

ಜಾತಿ ಧರ್ಮದ ಪ್ರಭಾವ : ಉತ್ತರ ಭಾರತಕ್ಕೆ ದಕ್ಷಣ ಭಾರತದಿಂದ ಯಾರೇ ಬಂದರೂ ಅವರನ್ನು ತಮಿಳಿಯನ್, ಆಂದ್ರವಾಲ್, ಮಲೆಯಾಳಿ ಈ ರೀತಿಯಾಗಿ ಗುರುತಿಸುವರು ಕನಾ౯ಟಕದ ಬಗ್ಗೆ ತುಂಬಾ ಜನಕ್ಕೆ ಗೊತ್ತೆ ಇಲ್ಲ. ಬೆಂಗಳೂರು ಎಂಬುದರ ಬಗ್ಗೆ ಗೊತ್ತು. ವಿಶೇಷ ಎಂದರೆ ತಮಿಳನಾಡಿನಿಂದ ಬರುವ ಯಾವುದೇ ಧರ್ಮದ ವ್ಯಕ್ತಿ ಇರಲಿ ಅವರ ಪರಿಚಯ ನಾನು ತಮಿಳಿಯನ್ ಎಂದು ಮಾಡಿಕೊಳ್ಳುವರು. ಅದೆ ರೀತಿ ನಾನು ಆಂಧ್ರವಾಲ, ನಾನು ಮಲೆಯಾಳಿ ಈ ರೀತಿಗಾಗಿ ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳುವರು. ಆದರೆ ನಮ್ಮ ರಾಜ್ಯದ ಜನರ ಪರಿಚಯ ನಾನು ಗೌಡ, ಲಿಂಗಾಯತ್, ವಿರಶೈವ, ಮುಸ್ಲಿಂ, ಈ ರೀತಿಯಾಗಿ ಇರುವುದು. ಅಥವಾ ತಮ್ಮ ಊರಿನ ಪರಿಚಯ ಮಾಡಿಕೊಳ್ಳುವರು. ಯಾರೂ ಸಹಾ ನಾನು ಕನ್ನಡಿಗ, ಕನಾ౯ಟಕದವರು ಎಂಬ ಪ್ರಥಮ ಪರಿಚಯ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮ ರಾಜ್ಯ, ಭಾಷೆಗಿಂತ ನಮ್ಮ ಜಾತಿ ಧರ್ಮದ ಗುರುತಿಸುವಿಕೆಯೇ ಮುಖ್ಯವಾಗಿರುವುದು. ಈ ರೀತಿಯ ಧರ್ಮದ, ಜಾತಿಯ ಮೋಹದಿಂದ ಹೊರ ಬಂದಾಗ ಮಾತ್ರ ನಮ್ಮ ರಾಜ್ಯ, ಭಾಷೆ ಉನ್ನತಿ ಹೊಂದಲು ಸಾಧ್ಯವಾಗುವುದು.

ಈ ಅಂಶಗಳು ಭಾಷೆಯ ಅಭಿವೃದ್ದಿಗೆ ತೊಡಕಾಗಿರುವ ಮುಖ್ಯ ಕಾರಣಗಳೆಂದು ಗುರುತಿಸಬಹುದಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇರುವ ನಾವು ಎಲ್ಲಾ ಅಂಶಗಳನ್ನು ಸಂಪೂಣವಾಗಿ ವಿರೋಧಿಸುವುದು ಕಷ್ಟ. ಆದರೇ ನಮ್ಮ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನು ಅಭಿಮಾನ, ಪ್ರೀತಿಯನ್ನು ಇರಿಸಿಕೊಂಡು ಮುಂದೆ ಹೋದರೆ ಖಂಡಿತ ಭಾಷೆ ಬೆಳವಣಿಗೆ ಆಗೇ ಆಗುವುದು. ತೊಡಕುಗಳು ಸಹಾ ಅವಕಾಶಗಳಾಗಿ ಪರಿವತ౯ನೆ ಆಗುವುದು.


ತಾಗುಲಿ : Hindrances to Kannada Development, Vivek Betkuli

ವಿವೇಕ ಅವರೆ ಸಮಸ್ಯೆಯ ಬುಡಕ್ಕಿಳಿದು ಅಂಶಗಳನ್ನೂ ಹೆಕ್ಕಿ ತೆಗೆದು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದೀರ 🙏

ನನ್ನ ಅಭಿಪ್ರಾಯದಲ್ಲಿ ಪರಿವರ್ತನೆ ಮನೆಯಿಂದ ಪ್ರಾರಂಭವಾಗಬೇಕು: ಕನ್ನಡ ಮಾತು, ಕನ್ನಡದೂಟ, ಕನ್ನಡ ಚಿತ್ರ, ಪುಸ್ತಕಗಳು ಹೀಗೆ. ಸುತ್ತಲ ಸಂಗತಿಗಳ ಪ್ರಭಾವವೇನಿದ್ದರೂ ಒಟ್ಟು ನಿಂತ ಮನೆ, ಮನಗಳ ಬಲ ಸುತ್ತಲಿನ ಸನ್ನಿವೇಶವನ್ನೂ ಬದಲಿಸುವಷ್ಟು ಶಕ್ತಿಶಾಲಿ!

ಮತ್ತೊಂದು ಕಾರಣ:
ಯಾರು ಬಲಶಾಯಿಯು ಅವರು ಬಳಸುವ ಭಾಷೆಯನ್ನು ಹೇರುವುದು ಐತಿಹಾಸಿಕ ಸತ್ಯ. ನಮ್ಮ ಜನ ಈಗ ಆರ್ಥಿಕವಾಗಿ ಸ್ವಲ್ಪ ಹಿಂದಿರುವ ಕಾರ ಣ ನಮ್ಮ ಭಾಷೆಗೆ ಕುತ್ತು ಬಂದಿರುವುದು. ನಾವು ಈಗ ಕನ್ನಡವನ್ನ ವಾಣಿಜ್ಯ ಬಾಷೆಯಾಗಿ ಬಳುಸುತಿಲ್ಲ. ಕನ್ನಡದಲ್ಲಿ ಅಭ್ಯಾಸ ಮಾಡಿದರೆ ಕೆಲಸ ಸಿಗುವ ಖಾತ್ರಿ ಇಲ್ಲ. ಹೆಚ್ಚಿನ ಅಭಿಮಾನಿಗಳು ಹೊಟ್ಟೆಪಾಡಿಗೆ ದೇಶ ಬಿಡುವ ಸಾಮಾಜಿಕ ಪರಿಸ್ಥತಿ ಕೂಡ ಇನ್ನೊಂದು ಕಾರಣ.

ಸರಿಪಡಿಸುವುದು ಹೇಗೆ? ಕನ್ನಡ ಬಾರದವರಿಗೆ ಉಸಿರುಕಟ್ಟಿಸುವ ಪರಿಸ್ಥಿತಿಯನ್ನುಸೃಷ್ಟಿಸ ಬೇಕು ! ವಾಣಿಜ್ಯ ಸಂಸ್ಥೆಗಳಿಗೆ ಕನ್ನಡ ಉಪಯೋಗಿಸಿ ಇಲ್ಲವೇ ಬೇರೆ ಕಡೆ ಹೋಗಿ ಎನ್ನುವ ನಿಲುವ ತಾಳಬೇಕು!